ಬೆಂಗಳೂರು : ಕಾಂಗ್ರೆಸ್ ಪಕ್ಷದ ಸತೀಶ್ ಜಾರಕಿಹೊಳಿ ಅವರ ‘ಹಿಂದೂ ಎಂದರೆ ಕೆಟ್ಟ- ಅಶ್ಲೀಲ ಶಬ್ದ’ ಎಂಬ ಹೇಳಿಕೆಯನ್ನು ತಡೆದುಕೊಳ್ಳಲು ಸಾಧ್ಯವೇ? ಧರ್ಮ- ಸಂಸ್ಕೃತಿಯನ್ನು ಅವಮಾನ ಮಾಡುತ್ತೀರಾ? ನೆಹರೂ ಅವರೂ ಇದು ಹಿಂದೂಸ್ಥಾನ ಎಂದಿದ್ದರು. ಸತೀಶ್ ಅವರ ಹೇಳಿಕೆ ದೇಶ ಒಡೆಯುವ ಕೆಲಸ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಇಂದು ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿಯ ಹಿಂದೂ ವಿರೋಧಿ ನಿಲುವನ್ನು ರಾಹುಲ್ ಗಾಂಧಿ ಮತ್ತಿತರ ನಾಯಕರು ಖಂಡಿಸಿಲ್ಲ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷವು ದೇಶ ಒಡೆಯುವ ಪಕ್ಷವೇ ಅಥವಾ ದೇಶ ಜೋಡಿಸುವ ಪಕ್ಷವೇ ಎಂದು ಪ್ರಶ್ನಿಸಿದರು. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಪಕ್ಷ ಅನುಸರಿಸುತ್ತಾ ಬಂದಿತ್ತು. ಆದರೆ, ದೇಶ ಒಂದಾಗಿದೆ. ಜನರು ಜಾಗೃತರಾಗಿದ್ದಾರೆ. 2018ರ ಮಾದರಿಯಲ್ಲೇ ದುಷ್ಟ ಕಾಂಗ್ರೆಸ್ ಪಕ್ಷವನ್ನು ಜನರು ಮನೆಗೆ ಕಳುಹಿಸುತ್ತಾರೆ ಎಂದು ವಿಶ್ವಾಸ ಸೂಚಿಸಿದರು. ರಾಜ್ಯದ ಎಲ್ಲರಿಗೂ ಸ್ವಾಭಿಮಾನದ ಬದುಕು ನೀಡುವುದೇ ನಮ್ಮ ಸಂಕಲ್ಪ ಎಂದರು.
ವಕ್ಫ್ ಆಸ್ತಿಯನ್ನು ಲೂಟಿ ಹೊಡೆದವರು ಕಾಂಗ್ರೆಸ್ಸಿಗರು ಎಂದ ಅವರು, ಈ ಕುರಿತು ತನಿಖೆ ಮಾಡಿ ಕಾನೂನಾತ್ಮಕ ಉಗ್ರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಜಲಜೀವನ್ ಮಿಷನ್ ಮೂಲಕ 27 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡಿದ್ದು, ಈ ವರ್ಷ ಮತ್ತೆ 25 ಲಕ್ಷ ಮನೆಗಳಿಗೆ ಈ ಸೌಕರ್ಯ ಕೊಡಲಾಗುತ್ತಿದೆ. ಕಾಂಗ್ರೆಸ್ ಪಕ್ಷವು ಕುಡಿಯುವ ನೀರು ಕೊಡಲಿಲ್ಲ. ಆರು ದಶಕ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷವು ದೇಶವನ್ನು ಒಡೆದು ಚೂರು ಮಾಡಿತ್ತು. ಈಗ ಭಾರತ್ ಜೋಡೋ ನಾಟಕ ಮಾಡುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷವು ಅಧಿಕಾರದ ಹಗಲುಗನಸನ್ನು ಕಾಣುತ್ತಿದೆ. ಕಾಂಗ್ರೆಸ್ಸನ್ನು ತಿರಸ್ಕರಿಸುವ ಸಂಕಲ್ಪವನ್ನು ಜನತೆ ಮಾಡಿದ್ದಾರೆ. ಇದು ಸ್ಪಷ್ಟವಾಗಿದೆ ಎಂದು ತಿಳಿಸಿದರು. ಯಡಿಯೂರಪ್ಪ ಅವರು ಜನರ ಸಂಕಷ್ಟವನ್ನು ಮನಗಂಡು ಜನಪರ ಆಡಳಿತ ಕೊಟ್ಟಿದ್ದರು ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷವು ದೌರ್ಭಾಗ್ಯದ ಸರಕಾರವನ್ನು ನೀಡಿತ್ತು. ಬಳಿಕ 2018ರಲ್ಲಿ ಅಧಿಕಾರದ ಆಸೆಯಿಂದ ಅದು ಸಮ್ಮಿಶ್ರ ಸರಕಾರ ಮಾಡಿತು. ಭ್ರಮನಿರಸನಗೊಂಡ ನಾಯಕರು ನಮ್ಮ ಪಕ್ಷ ಸೇರಿದರು. ಆ ಬಳಿಕ ಅಭಿವೃದ್ಧಿಯ ಶಕೆ ಆರಂಭವಾಗಿದೆ ಎಂದು ತಿಳಿಸಿದರು.
ನರೇಂದ್ರ ಮೋದಿಜಿ ಅವರ ಜನೋಪಯೋಗಿ ಕಾರ್ಯಕ್ರಮಗಳನ್ನು ಜನರ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದ ಅವರು, ಕರ್ನಾಟಕದ ಎಲ್ಲೆಡೆ ಜನಸಂಕಲ್ಪಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಇದು ವಿಜಯಯಾತ್ರೆಯಾಗಿ ವಿಧಾನಸೌಧದ 3ನೇ ಮಹಡಿಯಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸಲು ಕಾರಣವಾಗಲಿದೆ ಎಂದರು. ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ್, ಅತಿವೃಷ್ಟಿ ವೇಳೆ ಗರಿಷ್ಠ ಪರಿಹಾರ ಒದಗಿಸಿದ್ದನ್ನು ಅವರು ವಿವರಿಸಿದರು.
ರೈತ ಗಟ್ಟಿಯಾದರೆ ದೇಶ ಸದೃಢವಾಗಲು ಸಾಧ್ಯ ಎಂಬುದನ್ನು ಅರಿತು ಕಾರ್ಯ ನಿರ್ವಹಿಸಿದ್ದೇವೆ. ಸಾಮಾಜಿಕ ನ್ಯಾಯ ಎಂಬುದು ಕಾಂಗ್ರೆಸ್ಸಿಗರ ಬಾಯಿ ಮಾತಿನಲ್ಲಿತ್ತು. ನಾವು ಅದನ್ನು ಕೃತಿ ರೂಪದಲ್ಲಿ ಜಾರಿಗೊಳಿಸಿದ್ದೇವೆ ಎಂದು ಅವರು ತಿಳಿಸಿದರು. ಮೀಸಲಾತಿ ಹೆಚ್ಚಳ ನಮ್ಮ ಬದ್ಧತೆಯ ಪ್ರತೀಕ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಮುಂದಿನ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಶಾಸಕರ ಸ್ಥಾನವನ್ನು ಬಿಜೆಪಿ ಪಡೆಯಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಪ್ರಪಂಚದೆಲ್ಲೆಡೆ ನರೇಂದ್ರ ಮೋದಿಜಿಯವರ ನಾಯಕತ್ವಕ್ಕೆ ಮನ್ನಣೆ ಸಿಕ್ಕಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮೂಲಕ ಅವರು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. ಅವರಿಗೆ ಸರಿಸಮಾನರಾದ ಮುಖಂಡ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ಎಂದು ನುಡಿದರು.
ಭಾಗ್ಯಲಕ್ಷ್ಮಿ ಯೋಜನೆಯಿಂದ ಬಡವರ ಮನೆಯ 20 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯನ್ನು ಮೋದಿಜಿ ಮಾಡಿದರೆ ಅದಕ್ಕೆ ಪೂರಕ ನಿಧಿಯನ್ನು ನೀಡಿ ರೈತರಿಗೆ ನೆಮ್ಮದಿಯ ಜೀವನ ಕೊಟ್ಟಿದ್ದೇವೆ ಎಂದರು.
ನೆನೆಗುದಿಗೆ ಬಿದ್ದ ಅನೇಕ ಯೋಜನೆಗಳನ್ನು ರಾಜ್ಯದ ಬಿಜೆಪಿ ಸರಕಾರವು ಅನುಷ್ಠಾನಕ್ಕೆ ತಂದಿದೆ. ನೀರಾವರಿ ಯೋಜನೆಗೆ ಆದ್ಯತೆ ಕೊಡಲಾಗಿದೆ. ಮೋದಿಜಿ ಮತ್ತು ರಾಜ್ಯದ ಬಿಜೆಪಿ ಸರಕಾರದ ಸಾಧನೆಯನ್ನು ಗಮನಿಸಿ ಬಿಜೆಪಿಗೆ ಮತ ಕೊಡಿ ಎಂದು ಮನವಿ ಮಾಡಿದರು.
ಅಭಿವೃದ್ಧಿಯನ್ನು ಗಮನಿಸಿ ಜನತೆ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಏರುವ ಯತ್ನ ವಿಫಲವಾಗಲಿದೆ ಎಂದು ತಿಳಿಸಿದರು. ರಾಜ್ಯಕ್ಕೆ ಗರಿಷ್ಠ ಬಂಡವಾಳವು ಕೈಗಾರಿಕಾ ಕ್ಷೇತ್ರದಲ್ಲಿ ಹರಿದು ಬರಲಿದೆ ಎಂದು ಮೆಚ್ಚುಗೆ ಸೂಚಿಸಿದರು.
ರಾಜ್ಯದ ಅಭಿವೃದ್ಧಿ ಕಾರ್ಯಗಳು ಮತ್ತು ಬಿಜೆಪಿಗೆ ಸಿಗುತ್ತಿರುವ ಜನಬೆಂಬಲವನ್ನು ಗಮನಿಸಿ ಕಾಂಗ್ರೆಸ್ ಬೆಚ್ಚಿಬಿದ್ದಿದೆ. ಎಲ್ಲ ಕಡೆ ಸಂಕಲ್ಪ ಯಾತ್ರೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ದೊಡ್ಡ ಬಹುಮತದಲ್ಲಿ ಬಿಜೆಪಿ ಗೆದ್ದು ಬರಲಿದೆ ಎಂದು ತಿಳಿಸಿದರು. ಸಚಿವರು, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ