ಬೆಂಗಳೂರು, ಜನವರಿ 10: ಕೋವಿಡ್ ಸೋಂಕಿನಿಂದ ಕರ್ನಾಟಕವನ್ನು ಸುರಕ್ಷತಾ ಚಕ್ರದೊಳಗೆ ತರುವುದೇ ನಮ್ಮ ಸರ್ಕಾರದ ಗುರಿ. ಈ ಗುರಿ ಸಾಧಿಸುವ ವಿಶ್ವಾಸ ತಮಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಸಹ ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕಾ ಡೋಸ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕದಲ್ಲಿ ಲಸಿಕೆ ಕಾರ್ಯಕ್ರಮವನ್ನು ಶೇ.99 ರಷ್ಟು ಯಶಸ್ವಿಗೊಳಿಸಲಾಗಿದೆ. ಜನವರಿ 31 ರೊಳಗೆ ಶೇ.100 ರಷ್ಟು ಸಾಧನೆ ಮಾಡಲಾಗುವುದು. ಶೇ.77 ರಷ್ಟು ಎರಡನೇ ಡೋಸ್ ಆಗಿದ್ದು, ಜನವರಿ ಅಂತ್ಯಕ್ಕೆ ಶೇ.80 % ಸಾಧಿಸುವ ಗುರಿ ಇದ್ದು, ಫೆಬ್ರವರಿಯಲ್ಲಿ ಎರಡನೇ ಡೋಸ್ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕ ರಾಜ್ಯವನ್ನು ಸುರಕ್ಷತಾ ಚಕ್ರದೊಳಗೆ ತರಬೇಕೆನ್ನುವ ಸರ್ಕಾರದ ಗುರಿಯನ್ನು ಮುಟ್ಟಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕರೋನಾ ಯೋಧರು ದೇಶದ ನಿಜವಾದ ರಕ್ಷಕರಾಗಿದ್ದಾರೆ. ಯೋಧರು ದೇಶವನ್ನು ರಕ್ಷಿಸುವಂತೆ ಕರೋನಾ ಯೋಧರು ದೇಶದ ಪ್ರತಿಯೊಂದು ಕುಟುಂಬವನ್ನು ರಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ @BSBommai ಅವರು ಇಂದು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಸಹ-ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರಿಗೆ ಕೋವಿಡ್ ಮುನ್ನೆಚ್ಚರಿಕಾ ಡೋಸ್ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. (1/2)#KarnatakaFightsCorona #LargestVaccineDrive #Unite2FightCorona pic.twitter.com/1iEgaduNHu
— CM of Karnataka (@CMofKarnataka) January 10, 2022
ಕರ್ತವ್ಯ ನಿರ್ವಹಿಸುವಾಗ ಹಲವಾರು ತೊಂದರೆಗಳನ್ನು ಎದುರಿಸಿದರೂ, ಅವುಗಳನ್ನು ಲೆಕ್ಕಿಸದೇ ಆಶಾ ಕಾರ್ಯಕರ್ತರು, ವೈದರು, ನರ್ಸ್ಗಳೂ ಸೇರಿದಂತೆ ಮುಂಚೂಣಿ ಕಾರ್ಯಕರ್ತರು ಅಮೋಘ ಸೇವೆ ಸಲ್ಲಿಸುತ್ತಿದ್ದು, ದೇಶದ ನಿಜವಾದ ರಕ್ಷಕರಾಗಿದ್ದಾರೆ ಎಂದು ಮುಖ್ಯಮಂತ್ರಿಗಳು ಪ್ರಶಂಸಿದರು.
ಇಡೀ ವಿಶ್ವದಲ್ಲಿ ಕೋವಿಡ್ ನಿಂದ ರಕ್ಷಣೆ ಪಡೆಯಲು ಲಸಿಕೆಯೊಂದೇ ದಾರಿ. ಪ್ರಾರಂಭದಲ್ಲಿ ಕೆಲವೊಂದು ದೇಶಗಳು ಲಸಿಕೆಯ ಬಗ್ಗೆ ಹಗುರವಾದ ಭಾವ ತಾಳಿದ್ದರಿಂದ ಕೋವಿಡ್ ನ ಎರಡು ಹಾಗೂ ಮೂರನೇ ಅಲೆ ಹೆಚ್ಚಳವಾಯಿತು. ಈಗ ಪಾಶ್ಚಿಮಾತ್ಯ ದೇಶಗಳಲ್ಲಿ ಕೋವಿಡ್ ಲಸಿಕೆಯನ್ನು ಕಡ್ಡಾಯಗೊಳಿಸಿದ್ದಾರೆ. ಅಮೆರಿಕಾದ ಮೂರುಪಟ್ಟು ಲಸಿಕೆಗಳನ್ನು ಭಾರತ ದೇಶದಲ್ಲಿ ನೀಡಲಾಗಿದೆ. ಅಮೇರಿಕಾದಂತಹ ಆಧುನಿಕ, ಮುಂದುವರೆದ ದೇಶವಾದರೂ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗಲಿಲ್ಲ. ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದೆ. ಭಾರತದಲ್ಲಿಯೇ ತಯಾರಾದ ಕೋವಿಡ್ ಲಸಿಕೆ ಉತ್ತಮ ಗುಣಮಟ್ಟದ್ದಾಗಿದ್ದು, ಯಶಸ್ವಿಯಾಗಿ ನೀಡಲಾಗುತ್ತಿದೆ. ಇದಕ್ಕೆ ಭಾರತದ ಪ್ರಧಾನಮಂತ್ರಿಗಳ ನಾಯಕತ್ವ, ಅವರ ವಿಶ್ವಾಸರ್ಹತೆ ಹಾಗೂ ಕೋವಿಡ್ ಮುಂಚೂಣಿ ಕಾರ್ಯಕರ್ತರು ಪ್ರಮುಖ ಕಾರಣ ಎಂದು ತಿಳಿಸಿದರು.
ಯಾವುದೇ ಕ್ರಾಂತಿಕಾರಿ ನಿರ್ಣಯಗಳು, ವಿನೂತನ ಕಾರ್ಯಕ್ರಮಗಳಿಗೆ ಸಹಜವಾಗಿ ವಿರೋಧವಿರುತ್ತದೆ. ದೇಶದಲ್ಲಿ ಲಸಿಕೆ ಬಗ್ಗೆ ಬಹಳಷ್ಟು ಪರ ವಿರೋಧ ಚರ್ಚೆಗಳಾದವು. ಯಾವುದೇ ಲಸಿಕೆ ಸೂಕ್ತ ಪರೀಕ್ಷೆಗಳು, ಪ್ರಯೋಗಗಳು, ನಿಖರತೆಗಳನ್ನು ದೃಢಪಡಿಸಿಕೊಂಡ ನಂತರವೇ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುತ್ತದೆ. ಪ್ರಾರಂಭದಲ್ಲಿ ಲಸಿಕೆ ನೀಡಿಕೆಗೆ ಹಾಗೂ ಪರೀಕ್ಷೆಗೆ ಒಳಪಡಲು ವಿರೋಧ ವ್ಯಕ್ತವಾಯಿತು. ಕೋವಿಡ್ಗೆ ಯಾವುದೇ ಜಾತಿ ಬೇಧವಿಲ್ಲ. ನಮ್ಮಿಂದ ಬೇರೆಯವರಿಗೆ ತೊಂದರೆಯಾಗಬಾರದೆಂಬ ಭಾವನೆಯಿಂದ ಆರೋಗ್ಯ ಕಾರ್ಯಕರ್ತರಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ