ಬೆಂಗಳೂರು : ಸಂತುಷ್ಟ ರೈತನಿಂದ ಸಮೃದ್ಧ ಭಾರತ ಸಾಧ್ಯವಾಗಿದ್ದು,ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜೊತೆ ಕರ್ನಾಟಕ ಸರ್ಕಾರವು ಕಟಿಬದ್ಧವಾಗಿ ದುಡಿಯುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
“ವಿದ್ಯಾನಿಧಿ” ರೈತಮಕ್ಕಳಿಗೆ ಶಿಷ್ಯವೇತನ ಯೋಜನೆ ಲೋಕಾರ್ಪಣೆ ಕಾರ್ಯಕ್ರಮವನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೃಷಿ ನಾಶವಾದರೆ ದೇಶಕ್ಕೆ ದುರ್ಭಿಕ್ಷೆ ಬರುವ ಪರಿಸ್ಥಿತಿ ಎದುರಾಗಲಿದೆ ಎಂದು ಹಿಂದೆಯೇ ಹೇಳಲಾಗಿದೆ. ನಾನು ಮತ್ತು ನಮ್ಮ ಮುಖ್ಯಮಂತ್ರಿಗಳಿಬ್ಬರು ಸರ್ವಜ್ಞನ ನಾಡಿನಿಂದ ಬಂದವರು. ಕೃಷಿ ಮತ್ತು ಕೃಷಿಕ ಅತ್ಯಂತ ಪ್ರಾಮಾಣಿಕವಾಗಿ ಭೂಮಿ ಮಳೆಯನ್ನು ನಂಬಿ ಬದುಕುವಂತಹದ್ದು. ಬೆಳೆಹಾನಿ, ಬರ, ಪ್ರವಾಹ ಇದೆಲ್ಲದರ ಸಂಘರ್ಷದ ನಡುವೆ ರೈತ ಬದುಕಬೇಕಾಗುವಂತಹ ಸ್ಥಿತಿ ತಪ್ಪಿಸಲು ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಮೊದಲ ದಿನವೇ “ವಿದ್ಯಾನಿಧಿ” ರೈತ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ಯೋಜನೆ ಘೋಷಿಸಿದರು.
ಕೋವಿಡ್ ಲಾಕ್ಡೌನ್ ನಡುವೆಯೂ ಆಹಾರ ಉತ್ಪಾದನೆ ಹೆಚ್ಚಿದ್ದು ಇದರಲ್ಲಿ ಸುಮಾರು ಶೇ.10ರಷ್ಟು ಪಾಲು ದೇಶದ ಆಹಾರ ಉತ್ಪಾದನೆಯಲ್ಲಿ ಕರ್ನಾಟಕದ್ದು ಇದೆ. ಪ್ರತಿಯೊಂದು ರೈತ ಸಂಪರ್ಕ ಕೇಂದ್ರದಲ್ಲಿ 2 ಲಕ್ಷ ವಿದ್ಯಾರ್ಥಿಗಳು ಈ ವಿದ್ಯಾನಿಧಿ ಲೋಕಾರ್ಪಣೆ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ಕೇಂದ್ರದ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರ ನೇತೃತ್ವದಲ್ಲಿ ಈ ವಿದ್ಯಾನಿಧಿ ಲೋಕಾರ್ಪಣೆಯಾಗುತ್ತಿದೆ. ಕಳೆದ ವರ್ಷ 60 ಕೃಷಿ ಸಂಜೀವಿನಿ ವಾಹನಗಳನ್ನು ರೈತರ ಹೊಲಕ್ಕೆ ಲ್ಯಾಂಡ್ ಟೂ ಲ್ಯಾಬ್ ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದೆ. ರೈತನ ಹೊಲಕ್ಕೆ ನೇರವಾಗಿ ತೆರಳಿ ಪರಿಹಾರ ನೀಡುವ ಯಶಸ್ಸು ಕರ್ನಾಟಕ ಸರ್ಕಾರದ್ದಿದೆ. ರೈತ ಸೇವಾ ಸಂಸ್ಥೆಯಿಂದ ಎಲ್ಲಾ ರೈತ ಸಂಪರ್ಕ ಕೇಂದ್ರಕ್ಕೆ ಕೃಷಿ ಸಂಜೀವಿನಿ ವಾಹನ ನೀಡಲು ಸರ್ಕಾರ ಅವಕಾಶ ನೀಡಬೇಕೆಂದು ಸಿಎಂ ಬಳಿ ಮನವಿ ಮಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಸ್ವಾಭಿಮಾನಿ ರೈತ ಎನ್ನುವ ಗುರುತಿನ ಚೀಟಿ ಸುಮಾರು 1.5 ಲಕ್ಷ ರೈತರಿಗೆ ಈಗಾಗಲೇ ವಿತರಿಸಲಾಗಿದೆ. ರಾಜ್ಯದ ಎಲ್ಲಾ ರೈತರಿಗೂ ಈ ಗುರುತಿನ ಚೀಟಿ ನೀಡಲು ಸಿಎಂ ಮುಂದಾಗಬೇಕೆಂದು ಬಿ.ಸಿ.ಪಾಟೀಲ್ ಮನವಿ ಮಾಡಿದರು. ಕೃಷಿ ಯಂತ್ರೋಪಕರಣಗಳಿಗೆ ರಿಯಾಯಿತಿ ನೀಡಲಾಗುತ್ತಿದೆ. ವಿದೇಶಗಳಿಂದ ಎಣ್ಣೆಯನ್ನು ಆಮದು ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿ ಎಣ್ಣೆಕಾಳು ಬೆಳೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಕೋಲಾರ ರೈತರ ಮಾದರಿಯಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ಅಳವಡಿಸಿ ರೈತ ಲಾಭದಾಯಕನಾಗಲು ರೈತರೊಂದಿಗೊಂದು ದಿನ ಕಾರ್ಯಕ್ರಮ ಹಮ್ಮಿಕೊಂಡು ಈಗಾಗಲೇ 8 ಜಿಲ್ಲೆಗಳಲ್ಲಿ ರೈತರೊಂದಿಗೊಂದು ದಿನ ಕಾರ್ಯಕ್ರಮ ಮಾಡಲಾಗಿದೆ.
18-20 ಲಕ್ಷ ರೈತ ವಿದ್ಯಾರ್ಥಿಗಳು ಈ ವಿದ್ಯಾನಿಧಿ ಯೋಜನೆಯ ಫಲ ಪಡೆಯುತ್ತಿದ್ದಾರೆ. ಕಳೆದ ಬಾರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹೆಚ್ಚಿಗೆ ಆಧಾರ್ ಕಾರ್ಡ್ ಅಳವಡಿಸಿದ ದೇಶದ ಮೊದಲ ಕೀರ್ತಿಗೆ ಕರ್ನಾಟಕ ಕೇಂದ್ರದಿಂದ ಪ್ರಶಸ್ತಿಗೆ ಪಡೆದಿದೆ. ರೈತರೇ ತಮ್ಮ ಬೆಳೆಗೆ ತಾವೇ ಸಮೀಕ್ಷೆ ನಡೆಸಿ ಸರ್ಟಿಫಿಕೇಟ್ ನೀಡುವಂತಹ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಮಾಡಲಾಗುತ್ತಿದ್ದು, ಎಲ್ಲಾ ಇಲಾಖೆಗಳು ಇದಕ್ಕೆ ಕೈಜೋಡಿಸಿವೆ. ಕೇಂದ್ರ ಸರ್ಕಾರ ಕರ್ನಾಟಕವನ್ನು “ಅಗ್ರಿ ಟ್ರೆಂಡ್ ಸೆಟ್ಟರ್ “ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಕಾರ್ಯಕ್ರಮವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದು, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮಾರ್, ಶೋಭಾ ಕರಂದ್ಲಾಜೆ, ತೋಟಗಾರಿಕಾ ಸಚಿವ ಮುನಿರತ್ನ, ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ